ರಂಜನಿ ಮೆಮೋರಿಯಲ್ ಟ್ರಸ್ಟ್‍ನ 5 ನೇ ವಾರ್ಷಿಕ ಸಂಗೀತ ಕಾರ್ಯಕ್ರಮ, ಹಲವು ದ್ರಷ್ಟಿಯಿಂದ ಈ ಬಾರಿ ಭಿನ್ನವಾಗಿ ಅನನ್ಯವಾಗಿ ನೆರವೇರಿತು.
ಸೆಪ್ಟೆಂಬರ್ 9 ಅಕಾಲಿಕವಾಗಿ ವಿಧೀವಶರಾದ, ಸಂಗೀತ ವಿದುಷಿ ರಂಜನಿ ಹೆಬ್ಬಾರ್ ಅವರ 36 ನೇ ಹುಟ್ಟುಹಬ್ಬವಾಗಿದ್ದು, ಈ ನೆನಪಿನಲ್ಲಿ ಈ ವರ್ಷ, ಸೆಪ್ಟೆಂಬರ್ 3 ರಿಂದ 9 ರ ವರೆಗೆ ಅತ್ಯಂತ ವಿಶಿಷ್ಟವಾದ, ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಅತ್ಯುತ್ತಮವಾದ ಸಂಗೀತ ಕಾರ್ಯಕ್ರಮಗಳನ್ನು ಪ್ರತಿವರ್ಷ ಆಯೋಜಿಸಲಾಗುತ್ತದಾದರೂ, ಈ ಬಾರಿ ಸಂಗೀತ ಹಾಗೂ ಸತ್ಸಂಗದೊಂದಿಗೆ, ರಂಜನಿಯವರಿಗೆ ಪ್ರಿಯವಾದ ವಸ್ತುವಾಗಿದ್ದ, ಪ್ರವಚನ – ವಿಚಾರ ಮಂಥನಗಳ ಕಾರ್ಯಕ್ರಮವನ್ನು ಜೋಡಿಸಿಕೊಂಡದ್ದು, ಅರ್ಥಪೂರ್ಣವೂ ಜಾನದಾಯಕವೂ ಆಗಿತ್ತು.
ಈ ಬಾರಿ ಸೆಪ್ಟೆಂಬರ್ 3 ರಿಂದ 6 ರವರೆಗಿನ ಕಾರ್ಯಕ್ರಮಗಳು, ಸ್ವಗ್ರಹವಾದ “ಲತಾಂಗಿಯಲ್ಲಿ”. 7-9 ರ ವರೆಗಿನ ಕಾರ್ಯಕ್ರಮಗಳು ಎಮ್ ಜಿ ಎಮ್ ಕಾಲೇಜಿನ ರವೀಂದ್ರ ಮಂಟಪದಲ್ಲಿ ನಡೆಯಿತು.
ಲತಾಂಗಿ ಯಲ್ಲಿ ನಡೆದ ಕಾರ್ಯಕ್ರಮಗಳು ಕೇಳುಗರಿಗೂ ಕಲಾವಿದರಿಗೂ ಬಹಳ ಆಪ್ತತೆಯನ್ನು ನೀಡಿ, ರಸಿಕರೊಂದಿಗೆ ಸಂವಾದಕ್ಕೆ ಎಡೆ ಮಾಡಿಕೊಡುವಲ್ಲಿ ಯಶಸ್ವಿಯಾದರೆ ರವೀಂದ್ರ ಮಂಟಪದ ದೊಡ್ಡದಾದ ಸಭಾಂಗಣದಲ್ಲಿ ನಡೆದ ಎಲ್ಲಾ ಕಾರ್ಯಕ್ರಮಗಳು ಭವ್ಯವಾಗಿದ್ದು, ದೊಡ್ಡ ಸಂಖ್ಯೆಯ ಶ್ರೋತೃಗಳಿಂದ ತುಂಬಿ, ಟ್ರಸ್ಟ್‍ನ ಸಾಮಥ್ರ್ಯವನ್ನೂ, ರೀಚ್ ನ್ನೂ ಹೇಳುವಂತಿದ್ದವು.

ಮೊದಲ ದಿನವಾದ ಸೆ. 3 ರಂದು ಸಂಜೆ 4.30 ರಿಂದ 5 ರವರೆಗೆ ರಂಜನಿಯವರ ತಾಯಿ, ವಸಂತಲಕ್ಷ್ಮೀ ಹೆಬ್ಬಾರ್ ಅವರು ಗಾಯನ ಪ್ರಸ್ತುತಪಡಿಸಿದರು. ಸಂಗೀತ ಶಿಕ್ಷಕಿಯಾಗಿ ಬಹಳ ಕಾಲದ ಅನುಭವ ಹಿಂದಿದ ಇವರು, ತಾವು ತಮ್ಮ ಮಗಳಿಂದ ಕಲಿತ ಸುಂದರವಾದ ಕೃತಿಗಳನ್ನು ಅವಳ ನೆನಪಿಗಾಗಿ ಹಾಡಿದರು. ಇವರಿಗೆ ಮೃದಂಗದಲ್ಲಿ ಸಹಕರಿಸಿದವರು ನಾರಾಯಣ ಬಳ್ಳಕ್ಕುರಾಯ ಹಾಗೂ ವಯಲಿನ್‍ನಲ್ಲಿ ಪ್ರಣೀತ ಬಳ್ಳಕ್ಕುರಾಯ ಇವರು.

Smt Vasanthalaxmi Hebbar singingಆ ಬಳಿಕ, ಶಿವಮೊಗ್ಗ ಮೂಲದ ಪ್ರಕಾಂಡ ಪಂಡಿತರಾದ ಶ್ರೀ ಎಲ್ ವಾಸುದೇವ ಭಟ್ ಅವರು “ಧರ್ಮದ ಹತ್ತು ಲಕ್ಷಣಗಳು” ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಅವರ ಪಾಂಡಿತ್ಯ ವಾಗ್ಝರಿ, ಓಘ, ನೀಡುವ ರೀತಿ, ಶಬ್ದ ಭಂಡಾರ, ವಿಚಾರ ಮಂಡನೆ, ಸೂಕ್ತ ಉದಾಹರಣೆಇವೆಲ್ಲವುಗಳು ಅಚ್ಚರಿ ಮೂಡಿಸುವಂಥದ್ದು. 2 ಗಂಟೆಗಳಿಗೂ ಮೀರಿದ ಇವರ ಪ್ರವಚನ ಭೋದಪ್ರದವಾಘಿತ್ತು.

ಎರಡನೆಯ ದಿನ ಸೆ. 4 ರಂದು ‘ಲತಾಂಗಿ’ಯಲ್ಲಿ ನಡೆದ ಕಾರ್ಯಕ್ರಮ ರಂಜನಿಗೆ ಬಹು ಇಷ್ಟವಾಗಿದ್ದ ‘ಸತ್ಸಂಗ’ ಭಜನಾ ಕಾರ್ಯಕ್ರಮ. ಪ್ರತಿವರ್ಷವೂ ಅತ್ಯಂತ ಶ್ರದ್ಧಾ ಭಕ್ತಿಯಿಂದ ಸತ್ಸಂಗ ನಡೆಯುತ್ತದಾದರೂ, ಈ ಬಾರಿ ಇದು ವಿಶಿಷ್ಟವಾದದ್ದು, ಆರ್ಟ್ ಆಫ್ ಲಿವಿಂಗ್‍ನ ಹಿರಿಯ ಗುರುಗಳಾದ ಶ್ರೀ ಛಾಯಾಪತಿ ಗುರೂಜಿ ಅವರ ಉಪಸ್ಥಿತಿಯಿಂದಾಗಿ. ತುಂಬಾ ಪ್ರೀತಿಯಿಂದ ಮಧ್ಯಾಹ್ನವೇ ಆಗಮಿಸಿ, ಮನೆಯವರೊಂದಿಗೆ ಊಟ, ಉಪಚಾರ ಸ್ವೀಕರಿಸಿ, ಸಂಜೆ ಸುಂದರವಾಗಿ ಭಜನೆ ಕಾರ್ಯಕ್ರಮ ನೆರವೇರಿಸಿಕೊಟ್ಟರು. ರಂಜನಿ ಅವರ ಪತಿ ಗುರುಪ್ರಸಾದ್ ಅವರೂ ಇದರಲ್ಲಿ ಪಾಲ್ಗೊಂಡದ್ದು ಆಪ್ತವಾಗಿತ್ತು.

ಮೂರನೆಯ ದಿನ ಸೆ. 5 ರಂದು, ಬೆಂಗಳೂರಿನ ವೈ ಜಿ ಶ್ರೀಲತಾ ಅವರು ವೀಣೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕಿರಿಯ ವಯಸ್ಸಿನಲ್ಲಿಯೇ ಹಿರಿಯ ಸಾಧನೆ ಮಾಡಿದ ಶ್ರೀಲತಾ ಅವರು ಬಾಲಗೋಪಾಲ (ಭೈರವಿ), ವಿಟಪಿ, (ಸರಿಸಮಾನವೆಲರು) ಎಂಬ ಬಹು ಅಪರೂಪದ ರಾಗದಲ್ಲಿ ಸುಂದರವಾಗಿ, ಶುದ್ಧವಾಗಿ, ಮನೋಹರವಾದ ಅಷ್ಟೇ ಸ್ಪಷ್ಟವಾದ ಗಮಕಗಳ ಮಿಂಚುವಿಕೆಯ ಮೂಲಕ ಎಲ್ಲರ ಗಮನ ಸೆಳೆದರು. ಇವರಿಗೆ ಸುನಾದಕೃಷ್ಣ ಅಮೈ ಅವರು ಮೃದಂಗ ಸಹಕಾರ ಅಷ್ಟೇ ಸಮರ್ಥವಾಗಿತ್ತು. ಪಿಸಿರಿಲ್ಲದ ನುಡಿತ, ವೀಣೆಯ ಕಂಪನ ವ್ಯಾಪ್ತಿಯೊಳಗೆ ರಾಗದ ಜೀವ ಸಂಚಾರವನ್ನು ತೆರೆದಿಡುವ ಜಾಣ್ಮೆ; ಬಿರ್ಕಾಗಳು ಅಥವಾ ವಳಿ, ಕುರುಳ ಮುಂತಾದ ಗಮಕಗಳನ್ನು ಸೂಕ್ತವಾದ ಜಾಗದಲ್ಲಿ ಅಚ್ಚುಕಟ್ಟಾಗಿ ವಿನಿಯೋಗಿಸುವ ಪ್ರಜ್ಞೆ; ಯಾವುದೇ ಆಧುನಿಕ ಕಸರತ್ತುಗಳಿಲ್ಲದ ನೇರ ನುಡಿಸಾಣಿಕೆ. ಸ್ವತಃ ಗಾಯಕಿಯೂ ಆಗಿರುವ ಕಲಾವಿದೆ ಕೃತಿಗಳ ಸಾಹಿತ್ಯಾರ್ಥಕ್ಕೆ ಆದ್ಯತೆ ನೀಡಿದ ಪರಿ ಶ್ಲಾಘನೀಯ.
ಮೊದಲಿಗೆ ಕಲ್ಯಾಣಿ ಅಟತಾಳ ವರ್ಣ ! ಮುಂದೆ ಸ್ವರವಿನಿಕೆಗಳ ಸಹಿತ ಕಮಲಾ ಮನೋಹರಿ (ಶಂಕರಂ ಅಭಿರಾಮ), ವಿಳಂಬ ಕಾಲದಲ್ಲಿ ಸೊಗಸಾಗಿ ಮೂಡಿ ಬಂದ ರೀತಿಗೌಳ (ಜನನೀ ನಿನ್ನು ವಿನಾ), ಅಪೂರ್ವ ರಾಗ ವಿಟಪಿ (ಸರಿ ಸಮಾನ) ಅಂತೆಯೇ ತ್ವರಿತಗತಿಯಲ್ಲಿ ಸಾಗಿದ ನಳಿನ ಕಾಂತಿ (ಪಾಲಯಸದಾ) ಕೃತಿಗಳು ತಂತಮ್ಮ ನೆಲೆಯಲ್ಲಿ ಸೌಖ್ಯವಾಗಿ ಮೂಡಿ ಬಂದವು.
ಪ್ರಧಾನ ರಾಗ ಭೈರವಿ (ಬಾಲಗೋಪಾಲ), ಸವಿಸ್ತಾರವಾದ ರಾಗಪೋಷಣೆ, ಪ್ರಬುದ್ಧವಾದ ಚಿಟ್ಟೆತಾನಂ, ನೆರವಲ್ ಮತ್ತು ಕ್ಲಿಷ್ಟ ಗಣಿತದ ಮುಕ್ತಾಯಗಳಿಂದ ಅಲಂಕೃತವಾಗಿದ್ದು ಇಡೀ ಪ್ರಸ್ತುತಿಗೆ ನ್ಯಾಯ ಒದಗಿಸಿತು. ಸಹವಾದನ ಮತ್ತು ತನಿಯಲ್ಲಿ ಮಿಂಚಿದ ಶ್ರೀ ಸುನಾದಕೃಷ್ಣ ಅಭಿನಂದನಾರ್ಹರು. ರಂಜನಿ ರಾಗಗಳ ಮಾಲಿಕೆ, ಆಹಿರ್ಭೈಯರವ್ನ ಲ್ಲಿ ದೇವರನಾಮ ಮತ್ತು ಮಧುವಂತಿಯ ತಿಲ್ಲಾನಾದೊಂದಿಗೆ ಈ ಕಛೇರಿ ಯಶಸ್ವಿಯಾಗಿ ಕೊನೆಗೊಂಡಿತ್ತು. ಭವಿಷ್ಯದಲ್ಲಿ ಉಜ್ವಲವಾಗಿ ಬೆಳಗಬಲ್ಲ ಭರವಸೆಯನ್ನು ಕಲಾವಿದೆ ನೀಡಿದ್ದಾರೆ.

ನಾಲ್ಕನೆಯ ದಿನವಾದ ಸೆ. 6 ರಂದು ‘ಲತಾಂಗಿ’ಯಲ್ಲಿ ನಡೆಯುವ ಕೊನೆಯ ಕಾರ್ಯಕ್ರಮವಾಗಿ ಶ್ರೀಮತಿ ದೇವಿ ಹಿಂದೂಸ್ಥಾನಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಮಳೆಯ ರಾಗವಾದ ‘ಸೂರ್ ಮಲ್ಹಾರ್’ ರಾಗದೊಂದಿಗೆ ಕಾರ್ಯಕ್ರಮವನ್ನು ಆರಂಭಿಸಿ, ರಾಗ – ಜೋಗ್ ನಲ್ಲಿ ವಿಸ್ತಾರವಾಗಿ ರಾಗವನ್ನು ಅನಾವರಣಗೊಳಿಸಿ, ನಂತರ ರಾಗ ಕೇದಾರ್ನಿಲ್ಲಿ ಸುಂದರವಾದ ಬಂದಿಷ್ಗೆಳನ್ನು ಪ್ರಸ್ತುತಗೊಳಿಸಿದರು. ನಿರ್ಗುಣಿ ಭಜನ್ ಮೂಲಕ ಮೆಚ್ಚುಗೆಗಳಿಸಿದರು. ಇವರಿಗೆ ಅತ್ಯಂತ ಸಮರ್ಥವಾಗಿ ತಬಲಾದಲ್ಲಿ ಮೈಸೂರಿನ ಶ್ರೀ ಭೀಮಾ ಶಂಕರ್ ಬಿದನೂರು ಹಾಗೂ ಹಾರ್ಮೋನಿಯಂನಲ್ಲಿ ಶ್ರೀ ಸತೀಶ್ ಭಟ್ ಅವರು ಸಹಕರಿಸಿ ಗಮನಸೆಳೆದರು. ದೈವದತ್ತವಾದ ಇಂಪಾದ ಶಾರೀರ. ತನ್ನ ಸಂಗೀತದ ಕುರಿತಾದ ನಿಷ್ಠೆ ಮತ್ತು ಬದ್ಧತೆ! ವರ್ಷಗಳ ಸಾಧನೆ ಮತ್ತು ಪರಿಶ್ರಮದಿಂದ ಮೆರುಗನ್ನು ಪಡೆಯುತ್ತಿರುವ ಇವರ ಗಾಯನ ಪಂಡಿತ ಪಾಮರರಿಬ್ಬರಿಗೂ ಹೃದ್ಯವೆನಿಸಿದೆ.
ಸೂರ್ ಮಲ್ಹಾರ್ ಮತ್ತು ಜೋಗ್ ಪ್ರಧಾನ ರಾಗಗಳಾಗಿದ್ದವು. ಈ ಬಂದಿಷ್ಗಿಳನ್ನು ಅನುಕ್ರಮವಾಗಿ ಮೂರು ಕಾಲಗಳಲ್ಲಿ ವಿಸ್ತರಿಸುತ್ತ, ಸ್ಪಷ್ಟವಾದ ‘ಅ’ ಕಾರಗಳು ನುಡಿಯುವ ‘ತಾನ್’ ಗಳು ಮತ್ತು ‘ಬೋಲ್ ತಾನ್’ ಗಳನ್ನು ಅಂದವಾಗಿ ನಿರ್ವಹಿಸಿದ ಪರಿ ರಸಿಕರಿಗೆ ಮುದ ನೀಡಿತು. ಮಧ್ಯಲಯದಲ್ಲಿ ‘ಕೇದಾರ್’ ರಾಗದ ಹಿತವಾದ ಪ್ರಸ್ತುತಿಯ ನಂತರ, ಮಾರು ಬೇಹಾಗ್ನಸಲ್ಲಿ ಹಾಡಲಾದ ವಚನ (ನುಡಿದರೆ ಮುತ್ತಿನ) ಮರಾಠೀ ಅಭಂಗ್, ಕಬೀರರ ನಿರ್ಗುಣಿ ಭಜನ್ (ಹೀರನ್ನಾ) ಮತ್ತು ಭೈರವಿಯಲ್ಲಿ ಒಂದು ಭಜನ್ ಹಾಡಿದ ಗಾಯಕಿ ಕಛೇರಿಯನ್ನು ಸಂಪನ್ನಗೊಳಿಸಿದರು. ಶ್ರೀ ಭೀಮಾ ಶಂಕರ್ ತಬಲಾದಲ್ಲಿ, ಶ್ರೀ ಸತೀಶ್ ಭಟ್ ಹಾರ್ಮೋನಿಯಂನಲ್ಲೂ ಹದವರಿತು, ಉತ್ಸಾಹದಿಂದ ಸಾಥ್ ನೀಡಿದ್ದಾರೆ.

ದಿನಾಂಕ 8-9-18 ರಂದು ಕಛೇರಿಯನ್ನು ನೀಡಿದವರು ಲತಾಂಗಿ ಸೋದರಿಯರಾದ ಕು. ಅರ್ಚನಾ ಮತ್ತು ಕು. ಸಮನ್ವಿ. ಯಾವುದೇ ಒತ್ತಡ ತೋರದ ಪ್ರಸನ್ನ ಮುಖಮುದ್ರೆ. ರಾಗ, ಲಯಗಳಲ್ಲಿ ಶಿಸ್ತು. ತುಸುವೇ ಹಸ್ಕಿ ಕಂಠಸಿರಿಯ ಅರ್ಚನಾ ತನ್ನ ಮಂದ್ರ ಸಂಚಾರಗಳಿಂದ ಮತ್ತು ರಾಗಸಾಂದ್ರತೆಯಿಂದ ಅಂತೆಯೇ ಸಮನ್ವಿ ತನ್ನ ತಾರ ಸಂಚಾರ ಮತ್ತು ಬಿಡಿಬಿಡಿಯಾಗಿ ನುಡಿಯುವ ಆಕರ್ಷಕ ಬಿರ್ಕಾಗಳಿಂದ ರಸಿಕರನ್ನು ಮಂತ್ರಮುಗ್ಧರನ್ನಾಗಿಸಿದರು.
ಹಮೀರ್ಕವಲ್ಯಾಣಿ ವರ್ಣ, ಆರಭಿ (ಸಕಲಗಣಾಧಿಪ) ಕೃತಿಯ ನಂತರ ವಿಸ್ತರಿಸಲಾದ ಮಾಮವ ಮೀನಾಕ್ಷಿ (ವರಾಳಿ) ಮತ್ತು ಭಾವಯುಕ್ತವಾದ ರಾಗ, ಸ್ವರವಿನಿಕೆಗಳಿಂದ ಕೂಡಿದ್ದ ಮುಖಾರಿ (ಎಂತನಿನೇ), ಎರಡೂ ಉತ್ತಮವಾಗಿದ್ದವು. ಪ್ರಧಾನ ರಾಗ ಕಾಂಭೋಜಿ (ಎವರಿಮಾಟ) ಈ ಕಛೇರಿಯಲ್ಲಿ ಮುಕುಟಪ್ರಾಯವಾಗಿ ಶೋಭಿಸಿತು. ಪರ್ಯಾಯವಾಗಿ ರಾಗವಿಸ್ತಾರ, ಒಳ್ಳೆ ಗಟ್ಟಿತನದ ಕೃತಿ ನಿರೂಪಣೆ, ನೆರವಲ್, ಕಲ್ಪನಾಸ್ವರಗಳನ್ನು ನೀಡಿದ ಗಾಯಕಿಯರು ಅಂತೆಯೇ ತಮ್ಮ ಚುರುಕಾದ ಬಿಲ್ಲುಗಾರಿಕೆಯಿಂದ ಮೋಡಿ ಮಾಡಿದ ಶ್ರೀಮತಿ ಚಾರುಲತಾ ರಾಮಾನುಜಂ ಈ ರಾಗವನ್ನು ಸಂಪೂರ್ಣವಾಗಿ ಪೋಷಿಸಿದ್ದಾರೆ. ಮೃದಂಗದಲ್ಲಿ ನಿಕ್ಷಿತ್ ಪುತ್ತೂರು, ಘಟದಲ್ಲಿ ಸುಖನ್ಯಾ ರಾಮಗೋಪಾಲ್ ವಿವಿಧ ನಡೆಗಳ, ಗತಿಗಳ ಹತ್ತಾರು ಮಜಲುಗಳನ್ನು ಪ್ರದರ್ಶಿಸಿ ಲಯಪ್ರಿಯರಿಗೆ ಸಂತಸವನ್ನು ನೀಡಿದ್ದಾರೆ.
ಕಛೇರಿಯ ಉತ್ತರಾರ್ಧದಲ್ಲಿ ಭಾವಪೂರ್ಣವಾಗಿ ಮೂಡಿ ಬಂದ ಗ್ರಾಮ್ಯ ಸೊಗಡನ್ನು ನೆನಪಿಸುವ – ಪಹಾಡಿ (ಅಕ್ಕ ಕೇಳವ್ವ) ವಚನ, ಚಾರುಕೇಶಿ ರಾಗಾಧಾರಿತ ಲಘುಪ್ರಸ್ತುತಿ ಮತ್ತು ಕಲ್ಯಾಣಿಯ ಗ್ರಹಭೇದ ತಿಲ್ಲಾನಾದೊಂದಿಗೆ ಕಛೇರಿ ಸಂಪನ್ನಗೊಂಡಿತು.

ಸೆ. 7 ರಂದು ನಡೆದ ಕಾರ್ಯಕ್ರಮ, ಬಹು ನಿರೀಕ್ಷೆಯ ರಂಜನಿ-ಗಾಯತ್ರಿಯವರ ಕಛೇರಿ. ತಮ್ಮ ಬಹು ಬ್ಯುಸಿ ಕಾರ್ಯಕ್ರಮಗಳ ಓಡಾಟಗಳ ಮಧ್ಯೆಯೂ ಟ್ರಸ್ಟ್‍ನ ರೂವಾರಿಗಳ ಆಸೆಯನ್ನರಿತು, ರಂಜನಿಯವರ ನೆನಪಿಗಾಗಿ ಅವರಿಬ್ಬರೂ ಬಂದು, ಹಾಡಿ ಸಂಗೀತ ರಸದೌತಣವನ್ನು ನೀಡಿದರು. ರುದ್ರಪ್ರಿಯ, ಬೇಗಡೆ, ತೋಡಿ ಹಾಗೂ ಪೂರ್ವಿಕಲ್ಯಾಣಿಯ ಪ್ರಮುಖ ಪ್ರಸ್ತುತಿಯಲ್ಲಿ ತಮ್ಮ ಅನನ್ಯತೆಯನ್ನು ಹಾಗೂ ಹೆಚ್ಚುಗಾರಿಕೆಯನ್ನು ತೋರಿದರು. ಕರ್ಣರಂಜನಿ ರಾಗದಲ್ಲಿ ಹಾಡಿದ ಖಂಡ ತ್ರಿಪುಟತಾಳದ ರಾಗಂ ತಾನಂ ಪಲ್ಲವಿಯು ಕರ್ಣರಂಜಕವಾಗಿತ್ತು.
ಈ ಕಾರ್ಯಕ್ರಮಕ್ಕೆ ಆಯೋಜಕರಾಗಿ ನೆರವಾದ ದೆಹಲಿ ವಾಸಿಯಾಗಿರುವ ಶ್ರೀ ರಾಜಮೋಹನ ವಾರಂಬಳ್ಳಿಯವರು ಕಾರ್ಯಕ್ರಮದಲ್ಲಿ ಪಾಲ್ಗೊಂಡದ್ದು ವಿಶೇಷ. ಇವರಿಗೆ ವಯೊಲಿನ್‍ನಲ್ಲಿ ಸಹಕರಿಸಿದವರು, ರಂಜನಿಯವರೊಂದಿಗೆ ಒಳ್ಳೆಯ ಒಡನಾಟ ಹೊಂದಿದ್ದ ಚಾರುಮತಿ ರಘುರಾಮನ್. ಮೃದಂಗದಲ್ಲಿ ಮನೋಜ್ ಶಿವ ಸಹಕರಿಸಿದ್ದರು. ಇವರಿಬ್ಬರ ಸಹವಾದನವು ಕಛೇರಿಗೆ ಅತ್ಯಂತ ಪೂರಕವಾಗಿತ್ತು.

ದಕ್ಷಿಣಾದಿ ಸಂಗೀತದಲ್ಲಿ ಕಂಡುಬರುವ ರಾಗ, ಲಯಗಳ ಇತಿಮಿತಿಗಳೊಂದಿಗೆ ಉತ್ತರಾದಿಯವರ ಒಯ್ಯಾರ, ಲಾಲಿತ್ಯಗಳನ್ನೂ ಸಮನಾಗಿ ಮೈಗೂಡಿಸಿಕೊಂಡಿರುವ ಅಪೂರ್ವ ಕಲಾವಿದೆಯರು. ಈಗಾಗಲೇ ಕೀರ್ತಿಯ ಶಿಖರದಲ್ಲಿರುವ ಈ ಗಾಯಕಿಯರನ್ನು ಕೇಳುವ ನಿರೀಕ್ಷೆಯಿಂದ, ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ನೆರೆದಿದ್ದ ಗುಣಗ್ರಾಹಿ ಶ್ರೋತೃಗಳನ್ನು ನಿರಾಶೆಗೊಳಿಸದೆ ಸಂತೃಪ್ತಿಯನ್ನು ನೀಡಿದ ಸೋದರಿಯರಿಗೆ ಅಭಿನಂದನೆಗಳು ಸಲ್ಲುತ್ತವೆ.
ರುದ್ರಪ್ರಿಯ (ಗಣನಾಯಕಂ), ಬೇಗಡೆ (ಕಡೈಕಣ್) ಮಧ್ಯಮಕಾಲದ ಕೃತಿಗಳ ನಂತರ ಹಿತವಾದ ಆಲಾಪನೆಯೊಂದಿಗೆ ನೀಡಲಾದ ತೋಡಿ (ಏನು ಧನ್ಯಳೋ) ರಾಗದ ಪ್ರಸ್ತುತಿಯಲ್ಲಿ ಮಿಂಚಿದ ಸ್ವರಕಲ್ಪನೆಗಳು, ಅಗಣಿತವೆನಿಸಬಹುದಾದ ವಿನ್ಯಾಸಗಳು, ಕುರೈಪ್ಪುಗಳು ರಸಿಕರನ್ನು ಸೆರೆಹಿಡಿದವು. ವಿಳಂಬ ಕಾಲದಲ್ಲಿ ಗಮಕಯುಕ್ತವಾಗಿ ಹಾಡಲಾದ ಯದುಕುಲಕಾಂಭೋಜಿ (ಎಚ್ಚರಿಕ ಗಾರಾರಾ) ಮತ್ತು ಅನಂತರ ನಿರೂಪಿಸಲಾದ ಪ್ರಧಾನರಾಗ ಪೂರ್ವಿಕಲ್ಯಾಣಿ (ಪರಮಪಾವನ) ಕೆಲಕಾಲ ಮನದಲ್ಲುಳಿಯುವಂತೆ ಸವಾಂಗ ಸುಂದರವಾಗಿ ವಿಜೃಂಭಿಸಿತು.
ಮಾಳವಿಯ (ಮರಿವೇರೆ ನಾ ಕೆವರು) ತ್ವರಿತಗತಿಯ ಕೃತಿಯ ನಂತರ ಗಾಯಕಿಯರು ರಾಗಂ ತಾನಂ ಪಲ್ಲವಿಗಾಗಿ ಕರ್ಣರಂಜನಿಯನ್ನು ಎತ್ತಿಕೊಂಡರು. ಪರ್ಯಾಯವಾಗಿ ಹಾಡಲಾದ ರಾಗವಿಸ್ತಾರ ಮತ್ತು ‘ತಾನಂ’ ಗಳಲ್ಲಿ ಪುನರುಕ್ತವಾಗದ ಸಂಚಾರಗಳ ಮಹಾಪೂರವನ್ನು ಹರಿಸಿದ ಗಾಯಕಿಯರು ಖಂಡ ತ್ರಿಪುಟತಾಳದಲ್ಲಿ ‘ಕರ್ಣ ರಂಜಿತ ಗಾನಾಮೃತ ಪಾನ | ಮೇ . . ಮೋಕ್ಷ ಮಾರ್ಗ ಸೋಪಾನ | ಮೇ’ ಎಂಬ ಪಲ್ಲವಿಯನ್ನು ಲಕ್ಷಣಯುತವಾಗಿ ಹಾಡಿ ರಾಗಮಾಲಿಕೆಯಲ್ಲಿ ಸ್ವರವಿನಿಕೆಯನ್ನೂ ನೀಡಿ ಸಭಿಕರನ್ನು ಮೂಕವಿಸ್ಮಿತರನ್ನಾಗಿಸಿದರು. ಯಮುನಾ ಕಲ್ಯಾಣಿ (ಹರಿಸ್ಮರಣೆ) ದೇವರನಾಮ ಮತ್ತು ಮಾರು ಬೆಹಾಗ್ ಅಭಂಗ್ ಈ ಕಛೇರಿಯ ಕೊನೆಯ ಪ್ರಸ್ತುತಿಗಳಾಗಿದ್ದವು.
ಅಪ್ರತಿಮವೆನಿಸಿದ ಈ ಗಾಯನಕ್ಕೆ ಪೂರಕವಾಗಿ ವಯಲಿನ್ ನುಡಿಸಿ ಸ್ವಂತಿಕೆಯನ್ನೂ ತೋರಿದ ಶ್ರೀಮತಿ ಚಾರುಮತಿ ರಘುರಾಮನ್ ಅಂತೆಯೇ ಮೃದಂಗದಲ್ಲಿ ಹದವರಿತ ಮೃದುವಾದನಕ್ಕೆ ಹೆಸರುವಾಸಿಯಾಗಿರುವ ಶ್ರೀ ಮನೋಜ್ ಶಿವ ಇಬ್ಬರೂ ಕಛೇರಿಯ ಯಶೋಭಾಗಿಗಳಾಗಿದ್ದಾರೆ.

ಸೆ. 8 ರಂದು ಮಧ್ಯಾಹ್ನ 3 ಗಂಟೆಯಿಂದಲೇ ‘ಲತಾಂಗಿ ಸ್ಕೂಲ್ ಆಫ್ ಮ್ಯೂಸಿಕ್’ನ ಭರವಸೆಯ ವಿದ್ಯಾರ್ಥಿಗಳಿಂದ ಸಂಗೀತ ಪ್ರಸ್ತುತಿ ನಡೆಯಿತು. ಉಡುಪಿವರಾದ ಕು. ಶ್ರೇಯಾ, ರಾಧಿಕಾ ಉಡುಪ, ಅದಿತಿ ಕೃಷ್ಣನ್, ಆಶ್ರಯ ಆಚಾರ್ಯ ಅವರ ಜೊತೆ, ಮೈಸೂರಿನವಳಾದ ಗೌರಿ ಪ್ರಸಾದ್ ಕೂಡ ಬಂದು, ಜೊತೆಯಲ್ಲಿ ಪಾಲ್ಗೊಂಡದ್ದು ಗಮನಾರ್ಹವಾಗಿತ್ತು. ವಯೊಲಿನ್ ಮೃದಂಗದಲ್ಲಿ ಪ್ರಣೀತ ಹಾಗೂ ನಾರಾಯಣ ಬಳ್ಳಕ್ಕುರಾಯರ ಸಹಕಾರ.
ಆ ಬಳಿಕ ನಡೆದದ್ದು ತುಮಕೂರಿನ ಶ್ರೀ ರಾಮಕೃಷ್ಣ ಮಠದ ಸ್ವಾಮೀಜಿಗಳಾದ ಶ್ರೀ ವೀರೇಶಾನಂದಜೀ ಅವರಿಂದ ಉಪನ್ಯಾಸ. ತಮ್ಮ ಉಪನ್ಯಾಸದುದ್ದಕ್ಕೂ ದಾಸ ಸಾಹಿತ್ಯ ಹಾಗೂ ಇತರ ಭಜನ್ಗ್ಳ ಉಲ್ಲೇಖ ಮಾಡಿದ ಅವರ ಸಂಗೀತ ಪ್ರೀತಿ ಎದ್ದು ಕಾಣುತ್ತಿತ್ತು.
ಹತ್ತು ನಿಮಿಷಗಳ ವಿರಾಮದ ಬಳಿಕ ಆರಂಭವಾದದ್ದು, ರಸಿಕರೆಲ್ಲರ ಬಹು ಬಯಕೆಯ ಅರ್ಚನ-ಸಮನ್ವಿಯವರ ಕಛೇರಿ. ಲತಾಂಗಿ ಸಹೋದರಿಯರೆಂದೇ ಹೆಸರು ಪಡೆದ ಇವರಿಬ್ಬರ ಕಛೇರಿ ಹಮೀರ್ಕಗಲ್ಯಾಣಿ, ಆರಭಿ, ವರಾಳಿಯ (ಮೀನಾಕ್ಷಿ ಮೇಮುದಂ), ಮುಖಾರಿ ರಾಘದ ಎಂತ ನಿನ್ನೆ ಹಾಗೂ ಪ್ರಮುಖ ಕೃತಿಯಾಗಿ ಕಾಂಭೋಜಿಯ ಎವರಿ ಮಾಟ ಹಾಗೂ ಆ ನಂತರದ ಎಲ್ಲಾ ಲಾಲಿತ್ಯ ಪೂರ್ಣ ಪ್ರಸ್ತುತಿಗಳೂ ಎಂದಿನಂತೆ ಲವಲವಿಕೆಯಿಂದ ಕೂಡಿತ್ತು. ಹಾಗೂ ಶ್ರೋತೃಗಳ ಮನ ತಣಿಸಿತ್ತು.
ಇವರಿಗೆ ವಯೊಲಿನ್ನಸಲ್ಲಿ ಚಾರುಲತಾ ರಾಮಾನುಜಂ ಹಾಗೂ ಘಟದಲ್ಲಿ ಹೆಸರಾಂತ ಕಲಾವಿದೆ ಸುಖನ್ಯಾ ರಾಂಗೋಪಾಲ್ ಇವರಿಬ್ಬರು ಸಹಕಾರ ನೀಡಿದ್ದು ತುಂಬಾ ವಿಶೇಷವಾಗಿತ್ತು. ಮೃದಂಗದಲ್ಲಿ ನಿಕ್ಷಿತ್ ಅವರ ವಾದನ ಅತ್ಯಂತ ಸಮರ್ಥವಾಗಿತ್ತು.

ಕೊನೆಯ ದಿನದ ಕಾರ್ಯಕ್ರಮ ಸೆ. 9 ರಂದು ರಂಜನಿಯವರ ಹುಟ್ಟುಹಬ್ಬದಂದು ಬೆಳಗ್ಗಿನ 10 ಗಂಟೆಯಿಂದಲೇ ಆರಂಭವಾಯಿತು. ಎಂದಿನಂತೆ ಸರಿಯಾದ ಸಮಯಕ್ಕೇ ವೇದಿಕೆಯನ್ನೇರಿದ ವಿಠಲ ರಾಮಮೂರ್ತಿ (ವಯೊಲಿನ್), ವಿ ವಿ. ಎಸ್ ಮುರಾರಿ (ವಯೋಲಾ), ಶ್ರೀ ಮುಷ್ಣಂ ರಾಜಾರಾವ್ (ಮೃದಂಗ), ತ್ರಿಪುಣಿತ್ತುರ ರಾಧಾಕೃಷ್ಣನ್ (ಘಟ) ಇವರುಗಳು ಅತ್ಯಂತ ಅಪೂರ್ವವಾದ ಕಾರ್ಯಕ್ರಮವನ್ನು ನಡೆಸಿಕೊಟ್ಟರು.
ಮಾಯಾಮಾಳವಗೌಳದಲ್ಲಿನ ರಾಗವಿಸ್ತಾರ, ವಯೊಲಿನ್‍ನಲ್ಲಿ ನುಡಿಸಿದ ಬಹುದಾರಿ, ವಯೋಲಾದಲ್ಲಿ ನುಡಿಸಿದ ವರಾಳಿಗಳು ಈ ಎರಡು ವಾದ್ಯಗಳ ಅನನ್ಯತೆ, ಭಿನ್ನತೆಯನ್ನು ತೋರಿಸಿದರೆ, ಜೊತೆಯಾಗಿ ನುಡಿಸಿದ ಖರಹರಪ್ರಿಯ ಈ ಎರಡು ವಾದ್ಯಗಳ ಮನೋಧರ್ಮದ ಹೊಂದಾಣಿಕೆ ಮನಮುಟ್ಟುವಂತಿತ್ತು, ಹೃದಯ ತಣಿಸುವಂತಿತ್ತು. ವಿಠಲ್ ರಾಮಮೂರ್ತಿ ಹಾಗೂ ವಿವಿಎಸ್ ಮುರಾರಿ ಅವರ ದ್ವಂದ್ವ ವಯೊಲಿನ್-ವಯೋಲಾ ವಾದನ ವಿಶಿಷ್ಟವಾಗಿ ನಡೆಯಿತು. ಪ್ರಕೃತಿ ಪುರುಷರ ಸಮಾಗಮ. ವಿಠಲ್ ಅವರದು ಲಾಲ್ಗುಡಿ ಲಾಸ್ಯದ ರೇಶ್ಮೆಯ ನೂಲಿನಷ್ಟು ನುಣುಪಿನ ಸ್ತ್ರೀ ಕಂಠದ ನಾದವಾದರೆ ಮುರಾರಿಯವರದು ತಳ ಸ್ಪರ್ಶದ ಘನ ಶಾರೀರದ ಅತ್ಯಂತ ನಾಜೂಕಿನ ಗಾಯನವೇ ಎಂದು ಕೇಳಿಸುವ ಧ್ವನಿ ಮಾಧುರ್ಯ. ಎರಡರ ಬೆರಕೆ ಅತಿಮಧುರ ಮತ್ತು ಮನ ಮನೋಹರ. ಮೇರು ಸಮಾನ, ಗುರುಲೇಕ, ಬ್ರೋವಭಾರಮಾ, ವರಾಳಿ,ಖರಹರಪ್ರಿಯ, ಕಾಪಿ, ಮಾಂಡ್ -ಒಂದೊಂದರಲ್ಲೂ ನಾವೀನ್ಯತೆಯ ಎಸಳುಗಳು. ಶ್ರೀಮುಷ್ಣಂರಾಜಾ ರಾವ್ ಅವರ ಘನ ಗಾಂಭೀರ್ಯ ದಿರಿಸು ಮತ್ತು ಪಾರಿಜಾತದ ಪಕಳೆಯಷ್ಟು ಮೃದು ಸ್ಪಷ್ಟತೆಯನ್ನು ಸಾರಬಲ್ಲ ಅವರ ನುಡಿಸಾಣಿಕೆಯ ವಿದ್ವತ್ಪೂರ್ಣ ನುಡಿಕಾರಗಳು ಕಚೇರಿಯ ಘನತೆಯನ್ನು ಅತಿ ಎತ್ತರಕ್ಕೆ ಮುಟ್ಟಿಸಿತ್ತು. ತ್ರಿಪುಣಿತ್ತುರ ರಾಧಾಕೃಷ್ಣನ್ ಅವರ ಘಟದೊಂದಿಗಿನ ತನಿಯಾವರ್ತನದ ವೈಭವ -ನೋಡಿ, ಕೇಳಿದವರ ಪುಣ್ಯ, ಎನ್ನದೆ ವಿಧಿಯಿಲ್ಲ.

ವಿಠಲ ರಾಮಮೂರ್ತಿಯವರು ರಂಜನಿಯ ಬಗ್ಗೆ ಮಾತನಾಡಿದ ಪ್ರತಿಯೊಂದು ಮಾತೂ ಶ್ರೋತೃಗಳ ಕಣ್ಣಂಚನ್ನು ಒದ್ದೆಯಾಗಿಸಿತ್ತು.
ಧನ್ಯವಾದ ನೀಡಿದ ಶ್ರೀ ಈಶ್ವರಯ್ಯನವರು ವಯೊಲಿನ್ ಹಾಗೂ ವಯೋಲಾ ನಡುವಿನ ವ್ಯತ್ಯಾಸ ಹಾಗೂ ವೈಶಿಷ್ಟ್ಯವನ್ನು ಅದರ ಸಮಗ್ರ ಇತಿಹಾಸದೊಂದಿಗೆ ತಿಳಿಸಿದ್ದು ವಿಶೇಷವಾಗಿತ್ತು.
ಮಧ್ಯಾಹ್ನದ ಭೋಜನದ ನಂತರ 2 ಗಂಟೆಯಿಂದ ನಡೆದದ್ದು, ಗಾರ್ಗಿ ಶಬರಾಯ ಅವರ ಕಛೇರಿ. ಇವರಿಗೆ ಮೃದಂಗದಲ್ಲಿ ಬಾಲಚಂದ್ರ ಆಚಾರ್, ವಯೊಲಿನ್‍ನಲ್ಲಿ ಕಾರ್ತಿಕೇಯನ್ ಹಾಗೂ ತಬಲಾದಲ್ಲಿ ಮಾಧವ ಆಚಾರ್ ಸಹಕರಿಸಿದ್ದು ಹೊಸ ರೀತಿಯದಾಗಿತ್ತು.
ಪೂರ್ವಿಕಲ್ಯಾಣಿ ಹಾಗೂ ಆಭೇರಿ (ಭಜರೇ ಮಾನಸ) ಕೃತಿಗಳನ್ನು ವಿಸ್ತರಿಸಿ ಭಾವಗೀತೆಗಳನ್ನು ಹಾಡಿ ರಂಜಿಸಿದರು.
ನಂತರದ ಬಹುಮುಖ್ಯ ಘಟ್ಟವಾದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅಭ್ಯಾಗತರಾಗಿ ಭಾಗವಹಿಸಿದವರು ಎಂಜಿಎಂ ಕಾಲೇಜಿನ ಪ್ರಾಂಶುಪಾಲರಾದ ಡಾ. ಎಂ ವಿಜಯ್ ಹಾಗೂ ಶ್ರೀ ಎ ಈಶ್ವರಯ್ಯ ಅವರು. ಟ್ರಸ್ಟ್‍ನ ಆಶೋತ್ತರದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮ ನಿರೂಪಿಸಿದವರು ಶ್ರೀಮತಿ ದೇವಿ. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹ ಧನದ ವಿತರಣೆ ಬಳಿಕ ಈಶ್ವರಯ್ಯನವರು ಬಹು ಮಾರ್ಮಿಕವಾಗಿ ಮಾತನಾಡಿದರು.

ಆ ಬಳಿಕ ನಡೆದದ್ದು ರಂಜನಿ ಮೊಮೋರಿಯಲ್ ಟ್ರಸ್ಟ್ನಂ ವೆಬ್ ಸೈಟ್ನು ಅನಾವರಣ ಹಾಗೂ ಲೋಕಾರ್ಪಣೆ. ಅಭ್ಯಾಗತರ ಕೈಯಿಂದ ಅನಾವರಣಗೊಳಿಸಿದ ಈ ವೆಬ್ಸೈಹಟ್ನವ ಹಿಂದೆ ರಂಜನಿಯವರ ತಮ್ಮ ಸಾರಂಗ ಹೆಬ್ಬಾರ್ರಿ ಶ್ರಮ ಹಾಗೂ ಪ್ರೀತಿ ಎದ್ದು ಕಾಣುತತಿತ್ತು. ಬಹು ಸುಂದರವಾಗಿ ಮೂಡಿದ ವೆಬ್ಸೈಅಟ್ನ ಚೌಕಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಆ ಬಳಿಕ ನಡೆದದ್ದು ವಿನೂತನವಾದ ಸಂಗೀತ ಸಂವಾದ ಕಾರ್ಯಕ್ರಮ. ಸಂಗೀತಗಾರರ ಮನದಲ್ಲಿದ್ದ ಮಾತುಗಳು ಹೊರಬರಲೇಬೇಕೆಂಬ ಉದ್ದೇಶದಿಂದ ಆಯೋಜಿಸಿದ ಈ ಕಾರ್ಯಕ್ರಮ, ಶ್ರೀಮತಿ ದೇವಿ ವೇದಿಕೆಯಲ್ಲಿದ್ದ ಕಲಾವಿದರನ್ನು ಮಾತನಾಡಿಸುವ ಪ್ರಯತ್ನದಲ್ಲಿ ಹಲವಾರು ಮೌಲಿಕವಾದ ಪ್ರಶ್ನೆಗಳನ್ನು ಎತ್ತಿದರು. ವಿಭಿನ್ನವಾದ ಈ ಕಾರ್ಯಕ್ರಮ ಲವಲವಿಕೆಯಿಂದ ಕೂಡಿತ್ತು.

ಏಳು ದಿನದ ಕಾರ್ಯಕ್ರಮದಲ್ಲಿ ಲತಾಂಗಿ ಸ್ಕೂಲ್ ಆಫ್ ಮ್ಯೂಸಿಕ್‍ನ ಸದಸ್ಯರೆಲ್ಲರ ನೆರವು ಪರಿಶ್ರಮಗಳು ಕಾರ್ಯಕ್ರಮಕ್ಕೆ ಸಾರ್ಥಕತೆಯನ್ನು ತಂದುಕೊಟ್ಟವು.
ಅಚ್ಚುಕಟ್ಟಾದ ವ್ಯವಸ್ಥೆ, ಸಮಯದ ಪರಿಪಾಲನೆ, ಉತ್ಸಾಹಗಳಿಂದ ಕಾರ್ಯಕ್ರಮ ಉದ್ದಕ್ಕೂ ಲವಲವಿಕೆಯಿಂದ ಕೂಡಿತ್ತು.
ಕೈಗೂಡದೆ ಒಡೆದು ಹೋದ, ಕನಸಾಗಿ ಹೋದ ರಂಜನಿ ಅಕ್ಕನ ನೆನಪಿನಲ್ಲಿ ನಡೆಯುತ್ತಿರುವ ಈ ಎಲ್ಲಾ ಕಾರ್ಯಕ್ರಮಗಳು, ಕೈಗೂಡುತ್ತಿರುವ ಕನಸು ಎಂಬಂತೆ ನಡೆದು, ಹೃದಯ-ಮನಸ್ಸನ್ನು ಒದ್ದೆಯಾಗಿಸಿದೆ, ಚಿಂತನೆಗೆ ಗ್ರಾಸ ನೀಡಿದೆ.

Leave a Reply

Your email address will not be published. Required fields are marked *